ಸುಧಾದಲ್ಲಿ ಪ್ರಕಟವಾದ ಕಥೆ
ಯಾಗದ ಕುದುರೆ
ಡಾ.ಪ್ರಕಾಶ ಗ.ಖಾಡೆ
ಮೂಡಗಲ್ಲು ಸಂಸ್ಥಾನದ ಮಹಾರಾಜರ ಕುದುರಿ ಏಕಾಏಕಿ ತಪ್ಪಿಸಿಕೊಂಡು ಕಾಡು ಸೇರಿದ ಸುದ್ದಿ ಬೆಳಗು ಮುಂಜಾನಿ ಹೊತ್ತಿಗೆ ಸುತ್ತ ಏಳೂರಿಗೆ ತಲುಪಿ ಮಹಾರಾಜರನ್ನು ಸೇರಿ, ಜನತೆಯನ್ನೂ ಚಿಂತೆಗೀಡು ಮಾಡಿತು. ಹಾಗೆ ನೋಡಿದರೆ ಅರಮನೆಯ ಹತ್ತಾರು ಕುದುರೆಗಳಲ್ಲಿ ಈಗಷ್ಟೇ ಎರಡು ದಿನಗಳ ಹಿಂದೆ ಬಂದು ಸೇರಿದ್ದ ಈ ಕುದುರೆ ತಪ್ಪಿಸಿಕೊಳ್ಳಲು ಕಾರಣವೂ ಇತ್ತು. ಕುದುರೆ ತಪ್ಪಿಸಿಕೊಂಡ ಸಂಗತಿ ಸ್ವತಃ ಮಹಾರಾಜರನ್ನೂ ಸೇರಿ ಮಹಾರಾಣಿಯವರಿಗೂ ತೀವ್ರವಾದ ಖಿನ್ನತೆಯನ್ನುಂಟು ಮಾಡಿತು. ಮಹಾರಾಜರು ತಮ್ಮ ಸಂಸ್ಥಾನದ ತೆರೆದ ಜೀಪನ್ನು ಸಿದ್ದ ಮಾಡಿಡಲು ಅರಮನೆಯ ಆಳುಗಳಿಗೆ ಹೇಳಿದರು. ಕುದುರೆ ಹುಡುಕಲು ಮಹಾರಾಜರೊಂದಿಗೆ ಮಹಾರಾಣಿಯವರೂ ಬರುವುದಾಗಿಯೂ ತಮ್ಮನ್ನೂ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಾಗ, ಮಹಾರಾಣಿಯವರ ಮನಸ್ಸನ್ನು ನೋಯಿಸುವ ಮನಸ್ಸು ಮಹಾರಾಜರಿಗೆ ಇರಲಿಲ್ಲ. ‘ಸರಿ ಸಿದ್ದರಾಗಿರಿ’ ಎಂದರು. ಜೀಪಿನಲ್ಲಿ ಬಂದೂಕು, ದಾರಿಯ ಆಯಾಸ ಕಳೆಯಲು ನೀರು, ಅಷ್ಟಿಷ್ಟು ಆಹಾರ ಎಲ್ಲವನ್ನು ಕೂಡಿಟ್ಟುಕೊಂಡು, ಬೆಳಗಿನ ಉಪಹಾರ ಮುಗಿಸಿ ಕುದುರೆ ಹುಡುಕಲು ರಾಜದಂಪತಿ ಹೊರನಡೆದರು.
*
ಸಂಸ್ಥಾನಕ್ಕೆ ಈಗಷ್ಟೇ ಸೇರಿದ್ದ ಈ ಕುದುರೆಗೆ ಒಂದು ಇತಿಹಾಸವಿತ್ತು. ಕುದುರೆ ಸುತ್ತಮುತ್ತ ಏಳೂರಿಗೆ ಆಶ್ಚರ್ಯದ ಸಂಕೇತವಾಗಿತ್ತು. ಅದು ಒಂದು ಸಾಧಾರಣ ಕುದುರೆಯಾಗಿರದೆ, ಅದಕ್ಕಿರುವ ಹೆಚ್ಚುಗಾರಿಕೆಯಿಂದ ಕುದುರೆಯನ್ನು ಕಣ್ಣಾರೆ ನೋಡುವುದೇ ಒಂದು ಪೂಜ್ಯನೀಯ ಮತ್ತು ಖುಷಿಯ ವಿಷಯವಾಗಿತ್ತು. ಮೂಲ ಜೈಪುರ ಸಂಸ್ಥಾನಕ್ಕೆ ಸೇರಿದ್ದ ಈ ಕುದುರೆ ಅದ್ಹೇಗೋ ಕರುನಾಡಿನ ಕೆಚ್ಚೆದೆಯ ಗಂಡುಮೆಟ್ಟಿನ ನೆಲ ಮೂಡಗಲ್ಲು ಸಂಸ್ಥಾನಕ್ಕೆ ಬಂದು ಸೇರಿತ್ತು. ಈ ಸೇರುವಿಕೆಯ ಹಿಂದೆ ಒಂದು ಇತಿಹಾಸವಿದೆ. ಸಂಸ್ಥಾನದ ಸರಹದ್ದಿನಲ್ಲಿ ಬರುವ ಗುಣಸಿರಿ ಗ್ರಾಮದ ಹೊರಗೆ ಮಹಾರಾಜರ ಪೂರ್ವಿಕರು ಬೇಸಿಗೆಯಲ್ಲಿ ಉಳಿದುಕೊಳ್ಳಲು ಒಂದು ಬೇಸಿಗೆ ಅರಮನೆ ಕಟ್ಟಿದ್ದರು. ಸುತ್ತ ಹಸಿರು ಚೆಲ್ಲಿದ ಪರಿಸರದಲ್ಲಿ ತುಂಬಾ ಎತ್ತರಕ್ಕಿರುವ ಸಮತಟ್ಟಾದ ಪ್ರದೇಶದಲ್ಲಿ ಕಟ್ಟಿದ ಈ ಬೇಸಿಗೆ ಅರಮನೆಯನ್ನು ಬಹುದೂರದಿಂದಲೂ ಗುರುತಿಸಬಹುದಿತ್ತು. ಬೇಸಿಗೆ ಅರಮನೆಗೆ ರಾಜರು ಬರುವುದು ತುಂಬಾ ಕಡಿಮೆ. ಈ ಭಾಗಕ್ಕೆ ಬೇಟೆಯಾಡಲು ಬಂದಾಗ ಮತ್ತು ರಾಜ್ಯಭಾರದ ಆಯಾಸ ಕಳೆಯಲು ಮಾತ್ರ ಬರುತ್ತಿದ್ದರು. ಉಳಿದಂತೆ ಇಲ್ಲಿಯ ಅರಮನೆಯ ಕೆಲಸಗಾರರು ಮತ್ತವರ ಕುಟುಂಬವರ್ಗದವರು ಅರಮನೆಯನ್ನು ನೋಡಿಕೊಳ್ಳುತ್ತಿದ್ದರು.
ದೇಶÀಕ್ಕೆ ಸ್ವಾತಂತ್ರ್ಯ ಬಂದು ಸಂಸ್ಥಾನಗಳು ಒಕ್ಕೂಟ ಸರಕಾರದಲ್ಲಿ ವಿಲೀನವಾದಾಗ ಮೂಡಗಲ್ಲು ಸಂಸ್ಥಾನವೂ ಇದಕ್ಕೆ ಹೊರತಾಗಲಿಲ್ಲ. ಆವಾಗ ಆಡಳಿತವೆಲ್ಲ ಸರಕಾರದ ಕೈ ಸೇರಿದಾಗ ಸಂಸ್ಥಾನದ ಅರಸರು ಅರಮನೆಯ ಅಸ್ತಿತ್ವ ಉಳಿಸಿಕೊಂಡು ಕೆಲವರು ಇಲ್ಲಿಯೇ ಉಳಿದರೇ, ಉಳಿದಂತೆ ರಾಜ ವೈಭೋಗಕ್ಕಾಗಿ ಕೆಲವರು ಕೊಲ್ಲಾಪುರ, ನಾಸಿಕ, ಪುಣೆ, ಮುಂಬೈ ಸೇರಿದ್ದರು. ಮೂಡಗಲ್ಲು ಸಂಸ್ಥಾನದಲ್ಲಿ ಉಳಿದುಕೊಂಡಿದ್ದ ಮಹಾರಾಜರು ಕೃಷಿಕರು, ಪ್ರಕೃತಿಪ್ರಿಯರು ಮತ್ತು ಜನ ಆರಾಧಕರೂ ಆಗಿದ್ದರು. ಸಂಸ್ಥಾನದ ಕಾರುಭಾರ ಹೋದರೂ ಜನತೆಯೊಂದಿಗಿನ ತಮ್ಮ ಹಿರಿತನವನ್ನು ಅವರೆಂದೂ ಕಳೆದುಕೊಂಡಿರಲಿಲ್ಲ. ಸ್ವತಃ ಕೃಷಿಕರಾಗಿದ್ದ ಮಹಾರಾಜರು ತೋಟ ಮಾಡಿಕೊಂಡು ಕಬ್ಬು, ತೆಂಗು, ಬಾಳೆ ಮೊದಲಾದ ಹಣ್ಣುಹಂಪಲ ಬೆಳೆದು ಈ ಭಾಗದಲ್ಲಿ ಹೆಸರಾಗಿದ್ದರು. ಮಹಾರಾಜರಿಗೆ ಹಳೆಯ ಕಾಲದ ಜೀಪು ಕಾರುಗಳನ್ನು ಸಂಗ್ರಹಿಸುವುದು, ಅತ್ಯುತ್ತಮ ಕುದುರೆಗಳು ಎಲ್ಲಿಯೇ ಇರಲಿ ಅವನ್ನು ಖರೀದಿಸುವುದು ಮತ್ತು ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವುದು ಅವರ ಬದುಕಿನ ಹವ್ಯಾಸವಾಗಿತ್ತು. ಮಹಾರಾಜರಿಗೆ ಪೂರಕವಾಗಿ ಮಹಾರಾಣಿಯವರೂ ಇದೇ ರೀತಿಯ ಮನೋಭಾವ ಹೊಂದಿದ್ದರು. ಹೀಗಾಗಿ ಸಂಸ್ಥಾನದ ಕುಟುಂಬವರ್ಗದವರನ್ನು ಸುತ್ತ ಹಳ್ಳಿಯವರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು.
*
ಪ್ರಜಾಪ್ರತಿನಿಧಿ ಸರಕಾರಗಳು ಬಂದು ಸಂಸ್ಥಾನದ ಆಡಳಿತ ಹೊರಟು ಹೋದಾಗ ಗುಣಸಿರಿಯ ಬೇಸಿಗೆ ಅರಮನೆಗೆ ಮಹಾರಾಜರ ಪರಿವಾರ ಬರುವುದು ಕಡಿಮೆಯಾಯಿತು. ಅರಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆಲಸದವರಿಗೆ ಸರಿಯಾದ ಸಂಬಳ ಸಿಗದೇ ಅವರೂ ಕಡಿಮೆಯಾಗುತ್ತಾ ಬಂದರು. ಹೀಗಾಗಿ ತುಂಬಾ ಬೆಲೆಬಾಳುವ ಅರಮನೆ, ಸುತ್ತಲಿನ ಹತ್ತಾರು ಎಕರೆ ಜಮೀನು ಉಸ್ತುವಾರಿಯಿಲ್ಲದೇ ಬಿಕೋ ಎನ್ನತೊಡಗಿತು, ಇಂಥ ಸುಸಜ್ಜಿತವಾದ ಕಟ್ಟಡ ಮತ್ತು ಆವರಣದಲ್ಲಿ ಒಂದು ಯೋಗ ಶಾಲೆಯನ್ನು ತೆರೆಯುವ ಯೋಚನೆ ಕೆಲ ಕ್ರೀಡಾಸಕ್ತರಲ್ಲಿ ಮೂಡಿತು, ಅವರು ತಡ ಮಾಡದೇ ಮಹಾರಾಜರಿಗೆ ತಮ್ಮ ಬೇಸಿಗೆ ಅರಮನೆಯನ್ನು ಬಿಟ್ಟುಕೊಡಲು ಕೇಳಿದರು.
ಮೊದಲೇ ಕ್ರೀಡೆ, ಕಲೆ, ಸಂಸ್ಕøತಿಯ ಪೋಷಕರಾಗಿದ್ದ ಮಹಾರಾಜರು ಮತ್ತು ಅವರ ಕುಟುಂಬವರ್ಗದವರು ಪೂರ್ಣ ಅನುಮತಿಯೊಂದಿಗೆ ಗುಣಸಿರಿಯ ಬೇಸಿಗೆ ಅರಮನೆಯನ್ನು ಅದಕ್ಕೆ ಹೊಂದಿಕೊಂಡ ಅಷ್ಟಿಷ್ಟು ಜಮೀನನ್ನು ಸಂತೋಷದಿಂದ ಬಿಟ್ಟುಕೊಟ್ಟಾಗ, ಗುಣಸಿರಿಯಲ್ಲಿ ರಾಜ್ಯದಲ್ಲಿಯೇ ಅಪರೂಪವಾದ ಒಂದು ಯೋಗ ವಿದ್ಯಾಲಯ ತೆಲೆ ಎತ್ತಿತು. ಇಲ್ಲಿ ಯೋಗ, ಕ್ರೀಡೆ, ಈಜು, ಕುದುರೆ ಸವಾರಿ ಹೀಗೆ ತರತರದ ವಿದ್ಯೆ ಹೇಳಿಕೊಡಲಾಗುವುದು, ವಸತಿಯುಕ್ತ ವಿದ್ಯಾಲಯವಾಗಿದ್ದು, ಎಂಟನೆಯ ತರಗತಿಯಿಂದ ಮೇಲಿನ ಮಕ್ಕಳು ಹೆಸರು ಹಚ್ಚಬಹುದು ಎಂದಾಗ ರಾಜ್ಯವ್ಯಾಪಿ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರತೊಡಗಿದರು.
ನೋಡ ನೋಡುತ್ತಿದ್ದಂತೆ ವಸತಿ ಯೋಗ ವಿದ್ಯಾಲಯ ಹತ್ತಾರು ಎಕರೆ ವಿಸ್ತೀರ್ಣ, ವಿವಿಧ ಕ್ರೀಡಾಂಗಣ, ಶಾಲಾ ಕೊಠಡಿಗಳು, ವಸತಿ ನಿಲಯಗಳು, ಈಜುಗೊಳ, ಭೋಜನಾಲಯ, ಕಲಾ ಮಂದಿರ, ವಿಜ್ಞಾನ ತಂತ್ರಜ್ಞಾನ ಕೊಠಡಿಗಳು ಮೊದಲಾದವುಗಳಿಂದ ವಿದ್ಯಾಲಯ ಬೃಹದ್ದಾಕಾರವಾಗಿ ಬೆಳೆಯತೊಡಗಿತು, ಆಟೋಟಗಳಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮತ್ತು ರಾಷ್ಠ್ರೀಯ ಪ್ರಶಸ್ತಿಗೆ ಭಾಜನರಾಗತೊಡಗಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನ ಸೆಳೆದು ಸೈ ಎನಿಸಿಕೊಂಡಿತು. ಒಂದು ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಂಡಾಗ ಜನ ಇಲ್ಲಿಗೆ ಬರುವುದು ಹೆಚ್ಚಾಗತೊಡಗಿತು. ರಾಜ್ಯದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿದ್ದು ವಿದ್ಯಾಭ್ಯಾಸದೊಂದಿಗೆ ವಿವಿಧ ಆಟೋಟ, ಯೋಗ, ಈಜು, ಸೈಕ್ಲಿಂಗ್ ಮೊದಲಾದವನ್ನು ಕಲಿಯುವಂತಾಯಿತು. ಓದು ಮತ್ತು ಆಟದಲ್ಲಿ ಈ ಕೇಂದ್ರದ ಕೀರ್ತಿ ಮೊಳಗಿತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ಬಾಲಕರು ವಿವಿಧ ಕ್ರೀಡೆ, ಯೋಗಾಸನಗಳಲ್ಲಿ ಹೆಸರು ಮಾಡಿದರು. ಬೇರೆ ಬೇರೆ ಮಂತ್ರಿಗಳು, ಮುಖ್ಯಮಂತ್ರಿಗಳು ಈ ಕೇಂದ್ರಕ್ಕೆ ಬರುವುದು, ಭೇಟಿ ಕೊಡುವುದು ನಡೆಯಿತು. ಹೀಗೆ ಈ ಕೇಂದ್ರವನ್ನು ನೋಡಲು ಬಂದಿದ್ದ ರಾಜ್ಯದ ಕ್ರೀಡಾ ಮಂತ್ರಿ ಬಾಪುರಾಮ ಅವರು ಈ ಕೇಂದ್ರಕ್ಕೆ ಏನಾದರೂ ಕಾಣಿಕೆ ಕೊಡಬೇಕೆಂದು ಮನಸ್ಸು ಮಾಡಿ ರಾಜಧಾನಿಗೆ ಹೋದವರು ಅಲ್ಲಿಂದ ಕೇಂದ್ರದ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ‘ರಾಜಧಾನಿಯಿಂದ ಒಂದು ಅತ್ಯುತ್ತಮವಾದ ಕುದುರೆಯನ್ನು ನಿಮ್ಮ ಕೇಂದ್ರಕ್ಕೆ ಕಳಿಸುತ್ತಿದ್ದೇನೆ, ಇದು ನಿಮ್ಮ ಕೇಂದ್ರದ ಮಕ್ಕಳಿಗೆ ಕುದುರೆ ಸವಾರಿ ಕಲಿಸಲು ಅನುಕೂಲವಾಗುತ್ತದೆ’ ಎಂಬ ಸಂದೇಶದೊಂದಿಗೆ ಕುದುರೆಯನ್ನು ಕಳಿಸುವ ವ್ಯವಸ್ಥೆ ಮಾಡಿದರು.
*
ಸಚಿವ ಬಾಪುರಾಮ ಅವರು ಕಳಿಸಿದ ಕುದುರೆ ಅಂತಿಂಥ ಕುದುರೆಯಾಗಿರಲಿಲ್ಲ. ಇಡೀ ದೇಶದ ಜನತೆಯನ್ನು ರವಿವಾರದ ಟಿ.ವಿ. ಎದಿರು ಕೂಡುವಂತೆ ಮಾಡಿದ್ದ ‘ರಾಮಾಯಣ’ ಸಿರಿಯಲ್ದಲ್ಲಿನ ಅಶ್ವಮೇಧಯಾಗದ ಕುದುರೆಯಾಗಿತ್ತು. ಬಾಪುರಾಮ ಅವರು ತುಂಬಾ ಖರ್ಚು ಮಾಡಿ ಈ ಕುದುರೆಯನ್ನು ಕೊಂಡಿದ್ದರು. ತಾವು ಭೇಟಿ ನೀಡಿದ ಪ್ರೀತಿಯ ನೆನಪಿಗಾಗಿ ಈ ಯೋಗ ಶಾಲೆಗೆ ಕುದುರೆ ಕೊಡಲು ತೀರ್ಮಾನಿಸಿದ್ದರು. ಈ ಸಂಗತಿಯನ್ನು ತಿಳಿದ ಶಾಲೆಯವರು ತುಂಬಾ ಅದ್ದೂರಿಯಿಂದಲೇ ಕುದುರೆಯನ್ನು ಬರಮಾಡಿಕೊಂಡರು. ಬೆಳಗು ಹರಿಯುವ ಹೊತ್ತಿಗೆ ಗುಣಸಿರಿ ಯೋಗಶಾಲೆಯ ಈ ಕುದುರೆಯನ್ನು ನೋಡಲು ಜನ ತಂಡೋಪತಂಡವಾಗಿ ಬರತೊಡಗಿದರು. ಕುದುರೆಯ ವಿಶೇಷ ಆಹಾರಗಳು ಜಿಲ್ಲಾ ಕೇಂದ್ರದಿಂದ ರವಾನೆಯಾದವು. ನೋಡ ನೋಡುತ್ತಿದ್ದಂತೆ ಕುದುರೆ ಸುತ್ತೇಲ್ಲ ಊರಿನ ಆಕರ್ಷಣೀಯ ವಸ್ತುವಾಯಿತು.
ಹೀಗೆ ಜನ ಬರುವುದು ಶಾಲೆಯವರಿಗೆ ಕಿರಿಕಿರಿಯಾಯಿತು. ಜೊತೆಗೆ ಅಶ್ವಮೇಧಯಾಗದ ಈ ಕುದುರೆಗೆ ಇಲ್ಲಿನ ಬಿರು ಬಿಸಿಲು ಹಾಗೂ ರುಚಿಸದ ಆಹಾರದಿಂದ ಯಾರೊಂದಿಗೂ ಸರಳವಾಗಿ ಬೆರೆÉಯಲಿಲ್ಲ. ಮಾನ್ಯ ಮಂತ್ರಿಗಳು ಕುದುರೆಯೊಂದಿಗೆ ಇದರ ಉಸ್ತುವಾರಿ ನೋಡಿಕೊಳ್ಳಲು ಇರಲೆಂದು ತಮ್ಮೂರಿನ ಒಬ್ಬ ಆಳುಮನುಷ್ಯ ಸಂಗಪ್ಪನನ್ನು ಕೊಟ್ಟು ಕಳಿಸಿದ್ದರು. ಕುದುರೆಯ ರ ಠ ಈ ಕ ಬಲ್ಲ ಈ ಸಂಗಪ್ಪ ಅದರ ಮೈಮೇಲೆ ಕೈ ಸವರಿ ಆತ್ಮೀಯತೆ ಬೆಳೆಸಿಕೊಂಡಿದ್ದ, ಹೀಗಾಗಿ ಅವನಿಗಷ್ಟೇ ಅದು ಸಹಕರಿಸತೊಡಗಿತು. ಸವಾರಿಗೆ ಬಳಸಿಕೊಳ್ಳಬೇಕೆಂದರೆ ಹತ್ತಿದವರನ್ನು ಕೆಡವಿ, ಹಿಂಗಾಲಿನಿಂದ ಒದ್ದು ಎಂತಿಂಥವರನ್ನೂ ಹಿಗ್ಗಾ ಮುಗ್ಗಾ ಝಾಡಿಸಿ ಬಿಡುತಿತ್ತು.
ಹೀಗೆ ಹತ್ತಾರು ದಿನಗಳು ಕಳೆದ ಮೇಲೆ ಹವಾಮಾನದ ವೈಪರಿತ್ಯದಿಂದಾಗಿಯೋ, ಆಹಾರದ ಬದಲಾವಣೆಯಿಂದಾಗಿಯೋ ಕುದುರೆ ತನ್ನ ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಳ್ಳತೊಡಗಿತು. ಬಾಲಕರಿಗೆ ಕುದುರೆ ಸವಾರಿ ಮಾಡಿಸಬೇಕೆಂದರೆ ಅದರ ವಿದ್ಯೆ ಬಲ್ಲ ತರಬೇತುದಾರರ ಅಗತ್ಯವಿತ್ತು. ಯಾರೂ ಎಲ್ಲೂ ಸಿಗದಿದ್ದಾಗ ಅನಿವಾರ್ಯವಾಗಿ ಅದನ್ನು ನೆನೆ ಹಾಕಿದ ಕಾಳುಗಳಿಂದ ಮೇಯಿಸಿವುದೇ ಆಯಿತು. ಕುದುರೆಗೆ ಯಾವಾಗ ಕೆಲಸವಿಲ್ಲದಾಯಿತೋ, ಕುದುರೆ ನೋಡಿಕೊಳ್ಳುತ್ತಿದ್ದ ಸಂಗಪ್ಪನಿಗೂ ಅದರ ಆಹಾರ, ಸ್ನಾನ, ಸ್ವಚ್ಛತೆ ಬಿಟ್ಟರೆ ಬೇರೆ ಕೆಲಸವಿಲ್ಲದಾಯಿತು. ಅಷ್ಟಿಷ್ಟು ಸೆರೆ ಕುಡಿಯುವ ಚಟ ಹೊಂದಿದ್ದ ಸಂಗಪ್ಪ ಗುಣಸಿರಿಗೆ ಹೋಗಿ ಪಾಕೀಟು ಹಾಕಿ ಬರುತ್ತಿದ್ದ. ಅಲ್ಲಿ ಪಾಕೀಟು ಹೊಟ್ಟೆ ತುಂಬಾ ಹಾಕಿ ಕಂಠಪೂರ್ತಿಯಾದ ಮೇಲೆ ಕೂಡಿದ ಜನರೆದಿರು ಕುದುರೆಯ ವರ್ಣನೆ ಮಾಡುತ್ತಿದ್ದ. ‘ದೇವ ಲೋಕದಿಂದ ಬಂದ ಕುದುರೆಯನ್ನು ಸ್ವತಃ ದೇವರು ಮಾತ್ರ ನಡೆಸಬಲ್ಲ. ಆ ದೇವರು ನಾನು’ ಎಂದು ಹೇಳಿಕೊಳ್ಳುತ್ತಿದ್ದ. ಇದರಿಂದಾಗಿ ಸಹಪಾಠಿ ಪಾಕೀಟು ಪ್ರಿಯರು ಸಂಗಪ್ಪನಿಗೆ ವಿಶೇಷವಾದ ಗೌರವ ಕೊಡುತ್ತಿದ್ದರು. ಪಾಕೀಟು ದಾಸನಾದ ಸಂಗಪ್ಪನಿಗೆ ಬರುಬರುತ್ತಾ ಹಣದ ಅಗತ್ಯ ಹೆಚ್ಚಾಯಿತು. ಅವನ ಸಂಬಳದಲ್ಲಿ ಇದೆಲ್ಲಾ ಸಾಲದಾಯಿತು. ಕುದುರೆಯನ್ನು ಒಂದೇ ಕಟ್ಟಿದರೆ ಕುದುರೆ ಹೋಗಿ ಕತ್ತೆಯಾದೀತೆಂದು ಆಟದ ಮಾಸ್ತರರ ಸಲಹೆಯಂತೆ ಅದನ್ನು ಸವಾರಿ ಮಾಡಿಕೊಂಡು ಬರಲು ಸಂಗಪ್ಪ ಶಾಲೆಯಿಂದ ಐದಾರು ಕಿಲೋ ಮೀಟರು ತೆಗೆದುಕೊಂಡು ಹೋಗಿ ಬರುತ್ತಿದ್ದ.
ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಂಡಿದ್ದ ಕುದುರೆಯನ್ನು ಈಗ ಯಾರು ಬೇಕಾದರೂ ಹತ್ತಿ ಸವಾರಿ ಮಾಡಬಹುದಾಗಿತ್ತು. ಗುಣಸಿರಿಗೆ ಹೋಗುತ್ತಿದ್ದ ಸಂಗಪ್ಪನಿಗೆ ಊರ ಹುಡುಗರು ಐದು, ಹತ್ತು ನೀಡಿ ಸಂಗಪ್ಪನೊಂದಿಗೆ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದರು. ಆ ರೂಪಾಯಿಗಳಲ್ಲಿ ಸಂಗಪ್ಪನಿಗೆ ಪಾಕೀಟಿನ ಚಿಂತೆ ದೂರವಾಯಿತು. ಒಂದೆಡೆ ಕುದುರೆಯ ಉಸ್ತುವಾರಿ ಖರ್ಚು ಹೆಚ್ಚುತ್ತಾ ಹೋಗಿದ್ದು, ಮತ್ತೊಂದೆಡೆ ಸಂಗಪ್ಪ ತನ್ನ ಪಾಕೀಟು ಚಟಕ್ಕಾಗಿ ಕುದುರೆಯನ್ನು ಬಳಸಿಕೊಳ್ಳುತ್ತಿರುವುದು ತಿಳಿದು ಜಿಲ್ಲಾ ಕೇಂದ್ರದಲ್ಲಿದ್ದ ಕೇಂದ್ರದ ಆಡಳಿತ ಮಂಡಳಿಯ ಪಿತ್ತ ನೆತ್ತಿಗೇರುವಂತಾಯಿತು. ಒಂದು ರವಿವಾರ ಕೇಂದ್ರ ಅರಮನೆ ಸಭಾಂಗಣದಲ್ಲಿ ಅವರೆಲ್ಲ ಮೀಟಿಂಗು ಸೇರಿ ಮೊದಲು ಸಂಗಪ್ಪನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿದರು. ಕುದುರೆಗಳನ್ನು ಸಾಕಿಕೊಳ್ಳುವ ಹವ್ಯಾಸವಿದ್ದ ಮೂಡಗಲ್ಲು ಸಂಸ್ಥಾನದ ಮಹಾರಾಜರಿಗೆ ನಮ್ಮದೊಂದು ಕುದುರೆಯನ್ನು ತಮ್ಮ ಕುದುರೆಗಳೊಂದಿಗೆ ಸಾಕಿಕೊಳ್ಳಬೇಕೆಂದು ವಿನಂತಿ ಮಾಡಿದಾಗ ಮಹಾರಾಜರು ಒಲ್ಲೆ ಎನ್ನಲಿಲ್ಲ. ‘ಕಳಿಸಿ ಕೊಡಿ, ತುಂಬಾ ಒಳ್ಳೆಯದಾಯಿತು’ ಎಂದರು.
ಕೇಂದ್ರದ ಅಡುಗೆ ಸಿಬ್ಬಂದಿಯವರು ಹತ್ತು ಕಿಲೋಮೀಟರು ದೂರವಿರುವ ಮೂಡಗಲ್ಲು ಅರಮನೆಗೆ ಕುದುರೆಯನ್ನು ಬಿಟ್ಟು ಬರಲು ಸಿದ್ದರಾದರು. ಯಾಗದ ಕುದುರೆ ಸಿದ್ದವಾಗಿ ಗುಣಸಿರಿಯಿಂದ ಮೂಡಗಲ್ಲಿಗೆ ಪ್ರಯಾಣಕ್ಕೆ ಹೊರಟು ನಿಂತಾಗ ಶಾಲೆಯ ಬಾಲಕರು ವಿಶೇಷ ಆದರಾಭಿಮಾನಗಳಿಂದ ಬಿಳ್ಕೊಟ್ಟರು. ಇಲ್ಲಿ ಇರುವಷ್ಟು ಕಾಲ ಉಣ್ಣಲು, ತಿನ್ನಲು ಎಳಷ್ಟೂ ಕಡಿಮೆ ಮಾಡಿರದ ಕಾರಣವಾಗಿ ಕುದುರೆ ತುಂಬಾ ಚೆನ್ನಾಗಿಯೇ ಬೆಳೆದಿತ್ತಾದರೂ, ಅದರ ತಕ್ಕುದಾದ ಕೆಲಸವಿಲ್ಲದ ಕಾರಣ ಕುದುರೆ ಒಂದರ್ಥದಲ್ಲಿ ಕತ್ತೆಯಾಗಿ ಪರಿವರ್ತನೆಯಾಗಿತ್ತು. ವೇಳೆಗೆ ಸರಿಯಾಗಿ ತಿನ್ನುವುದನ್ನು ಬಿಟ್ಟರೆ, ಅದಕ್ಕೆ ಕೆಲಸ ಮತ್ತು ತಿರುಗಾಡುವುದೆಂದರೆ ಅಲರ್ಜಿಯಾಗಿತ್ತು. ಶಾಲೆಯನ್ನು ಬಿಟ್ಟು ಮೂಡಗಲ್ಲು ಸಂಸ್ಥಾನಕ್ಕೆ ಹೊರಟ ಕುದುರೆ ತುಂಬಾ ನೋವಿನಿಂದಲೆ ತನ್ನ ಪಯಣ ಬೆಳೆಸಿತು.
*
ಸಂಸ್ಥಾನಕ್ಕೆ ಕುದುರೆಯನ್ನು ಬರಮಾಡಿಕೊಂಡ ಮಹಾರಾಜರು ಅಪರೂಪವಾದ ಈ ಕುದುರೆ ತಮ್ಮ ವಾಡೆಯನ್ನು ಸೇರಿದ್ದು ತಂಬಾ ಸಂತೋಷದಿಂದಲೆ ಸ್ವಾಗತಿಸಿದರು. ವಾಡೆಯ ಇತರ ಕುದುರೆಗಳೊಂದಿಗೆ ಬೆರೆಯಬೇಕಾದ ಯಾಗದ ಈ ಕುದುರೆ ಅಲ್ಲೂ ತನ್ನ ಮೊಂಡಾಟ ಹಿಡಿಯಿತು. ಶಾಲೆಯಲ್ಲಿದ್ದಾಗ ವೇಳೆಗೆ ಸರಿಯಾಗಿ ಉಣ್ಣಲು ತಿನ್ನಲು ಸಾಕಷ್ಟು ಬರುತ್ತಿದ್ದ ಕುದುರೆಗೆ ಇಲ್ಲಿಯ ನಿಯಮಿತತನ, ಸವಾರಿಯ ಅಭ್ಯಾಸಕ್ಕೆ ಹೊಂದಿಕೊಳ್ಳದೇ ಹೋಯಿತು. ಬಂದ ಇಡೀ ದಿನವಂತೂ ತನ್ನ ಮೊಂಡಾಟ ಹಿಡಿಯಿತು. ಹಗ್ಗ ಜಗ್ಗಿ ತಪ್ಪಿಸಿಕೊಳ್ಳಲು ನೋಡಿತು. ಮಾಹಾರಾಜರು ಎಷ್ಟೇ ಕಾಳಜಿ ಮಾಡಿದರೂ ಅದರ ಲಕ್ಷ್ಯವೆಲ್ಲಾ ಶಾಲೆಯ ಕಡೆಗೆ ಇದ್ದೀತು. ವಾಡೆಯ ಆಳುಗಳಿಗೆ ಈ ಕುದುರೆಯ ಮೊಂಡಾಟ ಸಹಿಸದಾಯಿತು. ಗುಣಸಿರಿಯಲ್ಲಿ ಇರುವಷ್ಟು ಕಾಲ ಏಟಿನ ರುಚಿ ನೋಡಿರದಿದ್ದ ಕುದುರೆಗೆ ಇಲ್ಲಿ ತಹಬದಿಗೆ ತರಲು ಪ್ರಯೋಗಿಸಿದ್ದ ಛಾಟಿ ಏಟುಗಳು ಕುದುರೆಯನ್ನು ತಲ್ಲಣಗೊಳಿಸಿದವು. ಈ ಎಲ್ಲ ತಲ್ಲಣಗಳ ಮುಕ್ತತೆಗಾಗಿ ರಾತ್ರಿ ಯಾವಾಗಲೋ ಹಗ್ಗ ಹರಿದುಕೊಂಡು ಯಾಗದ ಕುದುರೆ ವಾಡೆ ಬಿಟ್ಟು ತಪ್ಪಿಸಿಕೊಂಡು ಹೋಗಿತ್ತು.
*
ಸಂಸ್ಥಾನದ ಮಹಾರಾಜರು ಗುಣಸಿರಿ ಯೋಗ ಶಾಲೆಗೆ ಫೋನಾಯಿಸಿ, ‘ನಿಮ್ಮ ಕುದುರೆ ತಪ್ಪಿಸಿಕೊಂಡು ಹೋಗಿದೆ, ಶಾಲೆಗೇನಾದರೂ ಬಂದಿದ್ದರೆ ತಿಳಿಸಿ’ ಎಂದರು. ಬೆಳಗು ಮುಂಜಾನೆ ಬಂದ ಈ ಬರ ಸಿಡಿಲಿನ ವಾರ್ತೆ ವಸತಿ ಶಾಲೆಯ ಸಿಬ್ಬಂದಿಯ ತೆಲೆ ಕೆಡಿಸಿತು. ನೂರು ಎಕರೆ ವಿಶಾಲ ವಿಸ್ತೀರ್ಣದ ವಸತಿ ಶಾಲೆಯ ಪ್ರತಿ ಇಂಚಿಂಚೂ ಹುಡುಕಿಕೊಂಡು ಬಂದ ಶಾಲೆಯ ಸಹಾಯಕ ಸಿಬ್ಬಂದಿ ‘ಇಲ್ಲಿ ನಮ್ಮಲ್ಲಿ ಬಂದಿಲ್ಲ’ ಎಂದರು. ಹಾಗಾದರೆ ಎಲ್ಲಿ ಹೋಗಿರಬಹುದೆಂಬ ಚಿಂತೆ ಶಾಲೆಯವರನ್ನೂ ಕಾಡಿತು. ಜಿಲ್ಲಾ ಕೇಂದ್ರಕ್ಕೆ ಫೋನಾಯಿಸಿ ಆಡಳಿತಗಾರರಿಗೆ ಈ ಆಘಾತಕಾರಿ ಸುದ್ದಿ ಮುಟ್ಟಿಸಲಾಯಿತು. ತೀವ್ರ ಕಾಳಜಿ ಹೊಂದಿದ್ದ ಅವರು ‘ಕುದುರೆ ಎಲ್ಲಿಯೇ ಇರಲಿ, ಮಹಾರಾಜರೊಂದಿಗೆ ಹುಡುಕುವುದು ನಮ್ಮ ಕರ್ತವ್ಯವಾಗಿದೆ.’ ಎಂದರು. ಶಾಲೆಯ ಪಾಠ ಹೇಳುವ ಸಿಬ್ಬಂದಿ ಶಾಲೆಯಲ್ಲಿಯೇ ಉಳಿದು ಆಟದ ತರಬೇತುದಾರರೆಲ್ಲರೂ ಉಳಿದ ಸಿಬ್ಬಂದಿಯೊಂದಿಗೆ ತಂಡವಾಗಿ ಎಲ್ಲ ದಿಕ್ಕುಗಳಲ್ಲೂ ಕುದುರೆಯನ್ನು ಹುಡುಕುವುದು ಎಂದು ತೀರ್ಮಾನವಾಗಿ ಮೆಸ್ಸಿನಲ್ಲಿ ಸಿದ್ದವಾದ ಬೆಳಗಿನ ಅವಲಕ್ಕಿ, ಹಾಲು, ತತ್ತಿ, ಬಾಳೆಹಣ್ಣು ಹೊಟ್ಟೆಗೆ ಹಾಕಿಕೊಂಡು ಶಾಲಾ ಕ್ರೀಡಾ ಸಿಬ್ಬಂದಿ ಹೊರಡಲನುವಾಯಿತು. ಮಹಾರಾಜರಿಗೆ ಕರೆ ಮಾಡಿ ನಮ್ಮ ಶಾಲಾ ಸಿಬ್ಬಂದಿಯೂ ಯಾಗದ ಕುದುರೆ ಹುಡುಕಲು ಅಣಿಯಾಗಿದ್ದು, ನಮ್ಮ ಜಿಲ್ಲಾ ಆಡಳಿತಗಾರರು ತೀವ್ರವಾಗಿ ಸ್ಪಂದನ ನೀಡಿದ್ದು ನೀವೇನು ಕಾಳಜಿ ಮಾಡದಿರಿ ಅಂದಾಗ, ಮಹಾರಾಜರು ತಾವೂ ಕುದುರೆ ಹುಡುಕಲು ಹೊರಟಿದ್ದಾಗಿ ತಿಳಿಸಿದರು. ಪೂರ್ವ ದಿಕ್ಕಿನಿಂದ ಮಹಾರಾಜರು, ಪಶ್ಚಿಮ ದಿಕ್ಕಿನಿಂದ ಶಾಲಾ ಸೈನ್ಯ ಕುದುರೆ ಅರಸಿ ಕಾಡಿಗೆ ಬಿದ್ದರು.
*
ಯಾಗದ ಕುದುರೆ ಹುಡುಕಲು ಸ್ವತಃ ಹೊರಟ ರಾಜದಂಪತಿಗಳನ್ನು ಊರಜನ ಕೋಟೆ ದ್ವಾರದ ವರೆಗೂ ಬಂದು ಬಿಳ್ಕೊಟ್ಟು ಶುಭ ಹಾರೈಸಿದರು. ಸ್ವತಃ ಜೀಪು ಚಾಲನೆ ಮಾಡುತ್ತಿದ್ದ ಮಹಾರಾಜರು ಹಿಂದೆ ವಯಸ್ಸಿನಲ್ಲಿ ಮುಂಬೈ ,ಕೊಲ್ಲಾಪುರ, ಹೈದರಾಬಾದಗಳಲ್ಲಿ ನಡೆದ ಜೀಪು ರೇಸಿನಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡು ಬಂದಿದ್ದರು. ಮಹಾರಾಜರ ಜೀಪಿನಲ್ಲಿ ಪಯಣಿಸುವುದೆಂದರೆ ಮಹಾರಾಣಿಯವರಿಗೂ ರೂಢಿಯಾಗಿ ಹೋಗಿತ್ತು. ಏಳು ಸುತ್ತಿನ ಕೋಟೆ ದಾಟಿ ಬಂದಾಗ ಸುತ್ತ ಹಸಿರು ತುಂಬಿದ ಕಬ್ಬು, ತೆಂಗು, ಬಾಳೆ, ಪೇರಲ, ಚಿಕ್ಕು ತೋಟಗಳಿಂದ ಭೂರಮೆ ಶೃಂಗಾರಗೊಂಡಿದ್ದಳು. ಕುದುರೆಯ ಜಾಡು ಹಿಡಿದು ಹೊರಟ ಮಹಾರಾಜರು ದಾರಿಯೆಲ್ಲಿ ಸಿಕ್ಕವರನ್ನೇಲ್ಲ ‘ಕುದುರೆ ಕಂಡೀರಾ, ನಮ್ಮ ವಾಡೆ ಕುದುರೆ ಕಂಡೀರಾ?’ ಎಂದು ಕೇಳುತ್ತಿದ್ದರು. ಇಳೆಮಾವು ಕಾಲುವೆ ಬಳಿ ನೀರು ಕುಡಿಯಲು ಕುದುರೆಯೊಂದು ಹವಣಿಸುತ್ತಿದ್ದುದನ್ನು ಕಂಡಿದ್ದ ಒಬ್ಬ ರೈತ ಮಹಾರಾಜರಿಗೆ ನಿಖರ ಮಾಹಿತಿಯನ್ನು ನೀಡಿದಾಗ ಮಹಾರಾಜರು ತಮ್ಮ ಜೀಪು ಇಳಿದು ಮಹಾರಾಣಿಯವರೊಂದಿಗೆ ಕಾಲ್ನಡಿಗೆಯಲ್ಲಿಯೇ ಪಯಣ ಬೆಳೆಸಿದರು. ಮಹಾರಾಜರೊಂದಿಗೆ ಅಲ್ಲಲ್ಲಿ ಕೆಲಸ ಮಾಡುತ್ತಿದ್ದ ರೈತರೂ ಸೇರಿಕೊಂಡರು.
*
ಇತ್ತ ಪೂರ್ವಾಭಿಮುಖವಾಗಿ ಸಾಗಿದ್ದ ಶಾಲಾ ಸೈನ್ಯ ಯಾವ ವಾಹನಗಳಿಗೂ ಮೊರೆ ಹೋಗದೇ ಕಾಲ್ನಡಿಗೆಯಿಂದಲೇ ತಮ್ಮ ಪಥ ಸಂಚಲನದಿಂದ ರವಿಪುರ, ಕಡೇಗೊಳ್ಳ, ವೀರಭದ್ರ ಊರುಗಳನ್ನು ದಾಟಿ ಆರ್ಧ ದಾರಿ ಸವೆಸಿದ್ದರು. ಕಂಡ ಕಂಡ ಎಮ್ಮೆ, ಆಕಳು, ಕತ್ತೆ ಒಂದೂ ಬಿಡದೇ ಎಲ್ಲ ಪ್ರಾಣಿಗಳನ್ನು ಜಾಲಾಡಿದರೂ ‘ಯಾಗದ ಕುದುರೆ’ ಕಣ್ಣಿಗೆ ಕಾಣಲಿಲ್ಲ. ಅಲ್ಲಲ್ಲಿ ಬೀದಿ ತಿರುಗಿ ಹುಲ್ಲು ಮೇಯುತ್ತಿದ್ದ ಹೆಳವರ ಕುದುರೆಗಳನ್ನು, ಕುರಿಗಳೊಂದಿಗೆ ಕುದುರೆ ಸಾಕಿಕೊಂಡಿದ್ದ ಚಿಕ್ಕೋಡಿ ಭಾಗದ ಕುರಿಗಾರರ ಕುದುರೆಗಳನ್ನು ಸ್ವತಃ ಮುಟ್ಟಿ ನೋಡಿ ಇದು ತಮ್ಮದಲ್ಲವೆಂದು ಖಾತ್ರಿ ಮಾಡಿಕೊಂಡು ಮುಂದೆ ಸಾಗಿದರು.
*
ಮಹಾರಾಜರು ಮಾಹಿತಿ ಸಂಗ್ರಹ ಮಾಡಿಕೊಂಡು ಕಾಲ್ನಡಿಗೆ ಬಿಟ್ಟು ಮತ್ತೆ ಜೀಪು ಹತ್ತಿದರು. ಈ ಬಾರಿ ಅವರಿಗೆ ಹಸಿರಸಿರಿ ಕಡಿಮೆಯಾಗಿ ಗರಸು ಮಣ್ಣಿನ ಮತ್ತು ಅಲ್ಲಲ್ಲಿ ಶೇಂಗಾ ಬೆಳೆದ ಹೊಲಗಳು ಹತ್ತಿದವು. ಜೀಪಿನ ಪ್ರಯಾಣವನ್ನು ಅವರು ಮುಖ್ಯ ರಸ್ತೆ ಬಿಟ್ಟು ಒಳದಾರಿಯಲ್ಲಿ ಮುಂದುವರೆಸಿದರು. ಹೊಲಗಳ ಒಡ್ಡು, ಏರಿ ಇಳಿದು ಅವರ ಜೀಪು ಪಯಣಿಸತೊಡಗಿತು. ಅಲ್ಲಲ್ಲಿ ಗುಡಿಸಲವಾಸಿಗಳು ಮೂಡಗಲ್ಲು ಸಂಸ್ಥಾನದ ರಾಜದಂಪತಿಗಳು ತಮ್ಮ ಬಳಿ ಬಂದಿರುವುದನ್ನು ಕಂಡು ಹೌಹಾರಿ ಹರ್ಷಚಿತ್ತರಾದರು. ಬಂದ ಸಂಗತಿಯನ್ನು ಮಹಾರಾಜರು ಅರುಹಿ ಕುದುರೆ ಇರುವಿಕೆಯ ಬಗ್ಗೆ ಕೇಳಿದರು. ಈ ಹೊತ್ತಿಗೆ ನೆತ್ತಿಯ ಮೇಲೆ ಬಂದ ಸೂರ್ಯ ತನ್ನ ಸುಡುಬಿಸಿಲಿನಿಂದ ಮಹಾರಾಣಿಯವರಿಗೆ ತೀವ್ರ ಆಯಾಸವನ್ನುಂಟು ಮಾಡಿದನು. ಗುಡಿಸಲ ಬಳಿಯ ಬೇವಿನ ಮರದ ತಂಪಿನಲ್ಲಿ ವಿಶ್ರಮಿಸಿಕೊಂಡು ಮಹಾರಾಣಿಯವರು ರೈತಾಪಿ ಜನರ, ಸಾಮಾನ್ಯ ಸರಳ ಬದುಕನ್ನು ಕಂಡು ತುಂಬಾ ಖುಷಿ ಅನುಭವಿಸಿದರು.
*
ಪ್ರಖರ ಸುಡುಬಿಸಿಲಿನಲ್ಲಿ ಸೋತು ಸುಣ್ಣವಾಗಿ ಹೋಗಿದ್ದ ಇತ್ತ ಕೇಂದ್ರ ಸೈನ್ಯ ಯಾಗದ ಕುದುರೆಯ ಅನ್ವೇಷಣೆಗೆ ಬರುವಾಗ ಪೂರ್ವ ತಯಾರಿಯಿಲ್ಲದೇ, ಹುಂಬು ನಿರ್ಣಯದಿಂದ ಬಂದಿದ್ದ ಕಾರಣವಾಗಿ ಕುಡಿಯಲು ನೀರು, ತಿನ್ನಲು ಆಹಾರ ಜೊತೆಯಲ್ಲಿ ತಂದಿರಲಿಲ್ಲ. ಹೊತ್ತೇರಿದಂತೆ ಹೊಟ್ಟೆಯ ಹಸಿವು ಜಾಸ್ತಿಯಾಗಿ ಕಣ್ಣಲ್ಲಿ ಚುಕ್ಕೆ ಮೂಡಿ ತಮ್ಮ ಆಹಾರದ ಕುರಿತು ಚಿಂತಿಸತೊಡಗಿದರು. ತದಲಬಾಗಿ ಲಕ್ಕವ್ವ ನಮ್ಮ ಹೊಟ್ಟಿ ತುಂಬಸ ಎಂದು ಬೇಡಿಕೊಂಡರು. ಸಮೀಪದಲ್ಲಿಯೇ ಗೊಡದಳ್ಳಿ ಇರುವದಾಗಿಯೂ ಅಲ್ಲಿ ಹಳ್ಳಿ ಹೊಟೇ¯ದಲ್ಲಿ ಸಿಕ್ಕಷ್ಟು ತಿಂದರಾಯ್ತೆಂದು ಹೊಟ್ಟೆಯ ಹಸಿವಿನಿಂದ ದಿಕ್ಕು ಬದಲಿಸಿ ಗೊಡದಳ್ಳಿ ಕಡೆಗೆ ಹೆಜ್ಜೆ ಹಾಕಿದರು.
ರಾಜ ದಂಪತಿಗಳ ಪಯಣ ಸುಡುಬಿಸಿಲು ಲೆಕ್ಕಿಸದೇ ಮುಂದುವರೆದಿತ್ತು. ಒಮ್ಮೆ ಜೀಪಿನಲ್ಲಿ ಮಗದೊಮ್ಮೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಕುದುರೆಯ ಅನ್ವೇಷಣೆಯಲ್ಲಿ ತೊಡಗಿದ್ದ ಸಂಸ್ಥಾನದ ಈ ಕುಟುಂಬಕ್ಕೆ ಹುಚ್ಚು ನಾಯಿಯೊಂದರ ರೌದ್ರಾತಾರ ದರ್ಶನವಾಯಿತು. ನಾಯಿ ಕಚ್ಚುವ ರೀತಿಯಲ್ಲಿ ಮಹಾರಾಜರ ಮೈಮೇಲೆ ಏರಿ ಬರುವುದು ಮಹಾರಾಜರಿಗೆ ಸಹಿಸಿಕೊಳ್ಳಲಾಗಲಿಲ್ಲ. ರಾಣಿಯವರ ಪಿತ್ತ ನೆತ್ತಿಗೇರಿತು. ಜೀವದ ಮೇಲಿನ ಭಯದಿಂದ ಮಹಾರಾಜರು ಹಾರಿಸಿದ ಬಂದೂಕಿನ ಗುಂಡಿಗೆ ನಾಯಿಯು ಬ್ರಹ್ಮಾಂಡ ವ್ಯಾಪಿಸುವ ಹಾಗೆ ಚೀರಿ ಹೊಕ್ಕ ಗುಂಡನ್ನು ಹೊಟ್ಟೆಯಲ್ಲಿಟ್ಟುಕೊಂಡು ಸುರಿಯುವ ರಕ್ತವನ್ನು ಲೆಕ್ಕಿಸದೇ ಓಡತೊಡಗಿತು. ಅದುವರೆಗೂ ತಮ್ಮ ಪಾಡಿಗೆ ತಾವು ದೂರದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ರೈತಾಪಿ ಜನ ಈ ಗುಂಡಿನ ಸಪ್ಪಳ ಮತ್ತು ನಾಯಿಯ ಚೀರಾಟಕ್ಕೆ ಬೆಚ್ಚಿಬಿದ್ದು ಕೊಡಲಿ ಬಡಿಗೆಗಳೊಂದಿಗೆ ಓಡಿ ಬಂದರು. ಸ್ವತಃ ಮೂಡಗಲ್ಲು ರಾಜದಂಪತಿಗಳನ್ನು ಕಂಡ ಅವರು ಈ ಹುಚ್ಚುನಾಯಿ ಬಹಳ ದಿನಗಳಿಂದ ನಮಗೆಲ್ಲಾ ಕಾಡುತ್ತಿದ್ದು, ನಮಗೆಂದು ಸಿಗಲಿಲ್ಲ, ನಿಮ್ಮ ಕೈಯಲ್ಲಿ ಸಿಕ್ಕು ಅವಸಾನವಾಗಿದ್ದು ನಾವೆಲ್ಲಾ ನೆಮ್ಮದಿಯಿಂದ ಇರುವಂತಾಯಿತು ಎಂದು ಕೃತಜ್ಞತೆ ಹೇಳಿದರು, ಸತ್ತೇನೋ ಬಿದ್ದೇನೋ ಎಂದು ಓಟ ಕಿತ್ತಿದ ನಾಯಿಯ ಚೀರಾಟ ನಿಧಾನಕ್ಕೆ ಸ್ಥಬ್ಧವಾಯಿತು, ರಾಜ ದಂಪತಿಗಳ ಪಯಣಕ್ಕೆ ಜೀಪು ಮುನ್ನಡೆಯಿತು..
*
ಒಂದೆಡೆ ನೆತ್ತಿ ಸಡುವ ಉರಿಬಿಸಿಲು, ಖಾಲಿ ಹೊಟ್ಟೆಯಲ್ಲಿ ಕಂಗಾಲಾಗಿದ್ದ ಕೇಂದ್ರ ಸೈನ್ಯಕ್ಕೆ ಊರುಗೋಲವೆಂಬಂತೆ ಒಂದು ಗುಡಿಸಲು ಸಿಕ್ಕಿತು. ಒಳಹೊಕ್ಕು ನೋಡಿದಾಗ ಮುದುಕಿಯೊಬ್ಬಳು ಕಬ್ಬಿಣದ ಕಾಟದ ಮೇಲೆ ಒರಗಿದ್ದಳು. ಮನೆಯ ಇತರೆ ಸದಸ್ಯರು ದುಡಿಯಲಿಕ್ಕೆ ಹೊರಗೆ ಹೋಗಿದ್ದರು. ಹಾಕಿ ಮಾಸ್ತರರು ಗುಡಿಸಿನಲ್ಲಿ ಹಣುಕಿ ಹಾಕಿ ‘ಎಮ್ಮಾ ನಾವು ಮಾಸ್ತರ ಅದೀವು, ದೂರದಿಂದ ಬಂದೇವು. ನಮ್ಮ ಕುದುರೆ ಕಳಕೊಂಡಿತ್ತು, ಹುಡುಕಿಕೊಂಡು ಬಂದೇವ, ಈ ಕಡೆ ಏನಾರ ಬಂದೀತೇನ’ ಎಂದು ವಿಚಾರಿಸಿದರು. ಸರಿಯಾಗಿ ಕಣ್ಣು ಕಾಣದ, ಕಿವಿಯೂ ಕೇಳದ ಮುದುಕಿಗೆ ಯಾರು ಬಂದು ಏನು ಹೇಳಿದರು ಎಂದು ತಿಳಿಯದೇ ನಿದ್ದೆಗಣ್ಣಿಂದ ಎದ್ದು, ಕಣ್ಣು ಪಿಳಿ ಪಿಳಿ ಬಿಡತೊಡಗಿತು. ಇದು ಇತರ ಮಾಸ್ತರರಿಗೆ ಅರ್ಥವಾಯಿತು. ಮುದುಕಿಗೆ ನಾವು ಏನೇ ಹೇಳಿದರೂ ತಿಳಿಯುವದಿಲ್ಲ, ಎಂದು ಖಾತ್ರಿ ಮಾಡಿಕೊಂಡು, ಕೈ ಸೊನ್ನೆ ,ಬಾಯಿ ಸೊನ್ನೆ ಮಾಡಿ ಕುಡಿಯಲು ನೀರು ಕೇಳಿದರು. ‘ಆಯ್ತು.. ಆಯ್ತು ಎಂದು ಮುದುಕಿ ಅವರಿಗೆ ಕೂಡ್ರಲು ಹೇಳಿ ಸೀದಾ ಇನ್ನೊಂದು ಗುಡಿಸಿಲಿಗೆ ಹೋಗಿ ಒಂದ ಗಡಗಿ. ಒಂದ ಗ್ಲಾಸು ತಂದು ಮುಂದಿಟ್ಟಳು. ಹೋ.. ಅಜ್ಜಿ ಮಜ್ಜಿಗಿ ತಂದಾಳ ಎಂದು ತಿಳಿದು ಕಬ್ಬಡ್ಡಿ ಮಾಸ್ತರು ಎತ್ತಿ ಸುರುವಿಕೊಂಡು ಗ್ಲಾಸು ಬಾಯಿಗೆ ಹಚ್ಚಿದಾಗಲೇ ಗೊತ್ತಾಗಿದ್ದು, ಇದು ಮಜ್ಜಿಗೆ ಅಲ್ಲ ಸೇಂದಿ ಎಂದು. ಥೂ..ಥೂ ಎಂದು ಉಗುಳುತ್ತಾ ‘ಏನಬೇ ಮುದುಕಿ ನೀನು ನೀರ ಕೇಳಿದ್ರ ಮಜ್ಜಿಗಿ ಕೊಟ್ಟಿ ಅಂತಾ ಮಾಡಿದ್ವಿ, ನೀ ನೋಡಿದರ ಈ ಹೊಲಸ ಸೆರೆ ಕುಡಿಯಾಕ ಕೊಟ್ಟಿಯೆಲ್ಲ’ ಎಂದು ಗ್ಲಾಸು ಇಟ್ಟು ಮಾರುದೂರ ಜಿಗಿದು ನಿಂತರು. ಈ ಎಲ್ಲ ಸನ್ನಿವೇಶಗಳನ್ನು ದೂರದಲ್ಲಿ ಮರದ ಮೇಲೆ ಹುಣಸೇಕಾಯಿ ಹರಿಯುತ್ತಿದ್ದ ಧಡೂತಿ ಆಸಾಮಿ ಒಬ್ಬ ನೋಡಿ ಕೆಳಗಿಳಿದು ಬಂದು, ‘ರೀ ಸಾಹೇಬ್ರಾ.. ಯಾರ ಅದೀರಿ ನೀವು, ನಮ್ಮದು ಇಲ್ಲಿ ಸೇಂಧಿ ಮಾರು ಅಂಗಡಿ ಐತಿ. ನೀವು ಸೆರೆ, ಸೇಂಧಿ ಕುಡಿಯಾಕ ಬಂದೀರೇಂತ ತಿಳಿದು ನಮ್ಮವ್ವ ಸೇಂಧಿ ಕೊಟ್ಟಾಳ, ನೀವು ನೋಡಿದರ ಗರಿಗರಿ ಅಂಗಿ ಮಂದಿ ಅದಿರಿ, ಮುದುಕಿಗಿ ಏನ ತಿಳಿಬೇಕ, ಕ್ಷಮಾ ಮಾಡರಿ’ ಎಂದನು.
ಬಂದ ಮಾಸ್ತರು ಧಡೂತಿ ಆಸಾಮಿಗೆ ತಾವು ಬಂದ ಕಾರಣ ಅರುಹಿ ನಮ್ಮ ಕುದುರೆ ಎಲ್ಲಿಯಾದರೂ ಕಂಡರೆ ತಿಳಿಸಿ ಎಂದರು. ನಿಮ್ಮ ಕುದುರಿ ಸಿಕ್ಕರ ಎಲ್ಲಿ ತರಬೇಕ ಹೇಳ್ರೀ ತಂದ ಒಪ್ಪಿಸ್ತಿನೀ ಎಂದು ಭರವಸೆ ಕೊಟ್ಟ. ಧಡೂತಿ ಆಸಾಮಿಯಲ್ಲಿ ಒಂದು ಬಗೆಯ ಆತ್ಮೀಯತೆ ಬೆಳೆಯಿತು, ನಿಧಾನಕ್ಕೆ ಹಾಕಿ ಮಾಸ್ತರು ‘ಯಜಮಾನ ನಮಗ ಹೊಟ್ಟಿ ಹಸಿದು ಹೊಟ್ಟ್ಯಾಗ ಬೆಂಕಿ ಬಿದ್ದಾಂಗ ಆಗೈತಿ, ಇಲ್ಲಿ ಎಲ್ಲೇರ ಊಟ ಸಿಗತೈತೇನ, ರೊಕ್ಕಾ ಕೊಡತೀವ ಊಟಾ ಕೊಟ್ಟರ ಸಾಕು’ ಎಂದು ಹಲುಬಿದರು.
ಶಾಲೆಯಲ್ಲಿದ್ದಾಗ ಅಗದಿ ಟೈಮ್ ಟೈಮ್ಗೆ ಊಟಾ, ನಾಷ್ಟಾ, ಹಾಲು, ಹಣ್ಣು ತಿಂದಿದ್ದ ಈ ಮಾಸ್ತರ ಮಂದೀಗಿ ಈ ಅಡವ್ಯಾಗ ಏನ ಸಿಕ್ಕರೂ ತಿನಬೇಕಂತ ಅನಿಸಿತು. ಆವಾಗ ಧಡೂತಿ ಹೇಳಿದಾ ‘ಮೊದಲ ಹೇಳಬೇಕಲ್ಲರಿ, ಸಾಹೇಬ್ರ, ಎಷ್ಟ ಆರ ಮಂದಿ ಅದಿರೆಲ್ಲಾ. ಅರ್ಧತಾಸ ಟೈಮ್ ಕೊಡ್ರಿ, ಬಿಸಿ ಬಕ್ರಿ, ಅಂಡಾಕರಿ ಮಾಡಿಕೊಡ್ತೇವಿ’ ಎಂದಾಗ ಅರ್ಧ ಊಟ ಮಾಡಿದ ತೃಪ್ತಿ ಮಾಸ್ತರರಿಗಾಯ್ತು. ದೂರದಲ್ಲಿ ಬಾಳೆಗೆ ನೀರುಣಿಸುತ್ತಿದ್ದ ತನ್ನ ಹೆಂಡತಿಯನ್ನು ಕೂಗಿ ಧಡೂತಿ ಕರೆಸಿಕೊಂಡ. ಅಡವಿಯಲ್ಲಿದ್ದರೂ ಬಹಳ ಚೆಲುವೆಯಾದ ಹೆಂಡತಿ ಬಂದು, ಬಂದವರಿಗೆ ನಮಸ್ಕರಿಸಿ ಒಳ ಹೋದಳು. ಅವರಿವರ ಗುಡಿಸಲು ತಿರುಗಿ ತತ್ತಿ ಗ್ವಾಳೆ ಮಾಡಿ, ಬ್ಯಾಡಗಿ ಕೆಂಪ ಒಣ ಮೆಣಸಿನಕಾಯಿಂದ ಮಾಡಿಟ್ಟ ಮಸಾಲಿ ಖಾರ ಹಾಕಿ ಘಮ ಘಮಾ ಅನ್ನಾಂಗ ಅಂಡಾಕರಿ ಸಾರ ಮಾಡಿ, ಬಿಸಿ ಬಕ್ರಿ ಬಡಿದು ಬಂದವರಿಗೆ ಹೊಟ್ಟೆ ತುಂಬಾ ಉಣಿಸಿದರು.
ಮಾಸ್ತರ ಮಂದೀಗಿ ತುಂಬಾ ಖುಷಿಯಾಯ್ತು. ಈಗ ಮನೆಯವರೆಲ್ಲಾ ಪರಿಚಯಸ್ತರಂತಾದರು. ಸಣ್ಣಗೆ ಧಡೂತಿ ಮಾಸ್ತರರಿಗೆ ಕೈ ಮುಗಿದು ‘ಎಪ್ಪಾ ನಮ್ಮದೊಂದ ಹುಡುಗಿ ಕೊಡೋದು ಐತಿ, ಎಲ್ಲೇರ ವರಾ ಇದ್ರ ನೋಡ್ರಿ’ ಎಂದಾ. ಆಗ ಕಬ್ಬಡ್ಡಿ ಮಾಸ್ತರು ‘ಬೇಸಾಯ್ತು ಬಿಡು, ವರಕ್ಕೇನು ಕಡಿಮಿ, ಕನ್ಯಾನ ಸಿಗವಲ್ಲು’ ಎಂದು ಹೇಳಿ ಅವರ ಮಗಳ ಮಾಹಿತಿ ಪಡಕೊಂಡರು. ‘ನಮ್ಮ ಹುಡುಗಿ ಡಿಗ್ರಿ ಮುಗಿಸಿ, ಈಗ ಸಾಂಗ್ಲಿ ಮಹಾರಾಣಿ ಸೈನಿಕ ಸ್ಕೂಲದಾಗ ಕುದುರಿ ಸವಾರಿ ಕಲಸ್ತಾಳ, ಗಾಡಿ ಹೊಡಿತಾಳ, ಕುದುರಿ ಓಡಿಸ್ತಾಳ, ಕರಾಟೆ ಆಡತಾಳ, ಇಂಥ ವಿದ್ಯಾ ಬರಾಂಗಿಲ್ಲ ಅನಾಂಗ ಇಲ್ಲರಿ ಭಾಳಾ ಶ್ಯಾಣ್ಯಾ ಅದಾಳ್ರಿ. ಅವಳದಟ ಮದವಿ ಮಾಡಿ ಬಿಟ್ಟರ ನಮ್ಮ ಜವಾಬ್ದಾರಿ ಮುಗೀತ ನೋಡ್ರಿ.’ಎಂದು ವಿವರಣೆ ನೀಡುತ್ತಿದ್ದಾಗ, ಇನ್ನೂ ಮದುವೆಯಾಗಿರದ ಹಾಕಿ ಮಾಸ್ತರ ಸೂರ್ಯಕಾಂತ ಕಡೆ ಎಲ್ಲರೂ ನೋಡಿ ನಸು ನಕ್ಕರು. ಸೂರ್ಯಕಾಂತನೂ ತನ್ನ ಕುಡಿ ಮೀಸೆಯಲ್ಲಿಯೇ ಸಣ್ಣಗೆ ನಕ್ಕು ಕನಸಿನ ಲೋಕಕ್ಕೆ ಬಿದ್ದನು. ಸೂರ್ಯಕಾಂತ ಮಾಸ್ತರರಿಗೂ ಇನ್ನೂ ಲಗ್ನ ಆಗಿರಲಿಲ್ಲ, ಕನ್ಯಾ ಹುಡುಕುತಿದ್ದರು. ಬಹುಶಃ ರೊಟ್ಟಿ ಜಾರಿ ತುಪ್ಪದಾಗ ಬಿದ್ದಂಗ ಆಯ್ತು. ಮಾಸ್ತರ ಮಂದೀಗಿ ಬಂದ ಜವಾಬ್ದಾರಿ ನೆನಪ ಆಗಿ ‘ನಾವ ಮತ್ತ ಬರತಿವರಿ ಹಿರ್ಯಾರ, ಪರಿಚಯ ಆಗಿ ಭಾಳ ಚಲೋ ಅಯ್ತು, ನಮ್ಮ ಕುದುರಿ ಸಿಕ್ಕರ ತಿಳಿಸ್ರೀ, ಎಂದು ಎದ್ದು ದುಡ್ಡು ಕೊಡಲು ಹೋದರು. ತ್ವಾಟದ ದಂಪತಿ ‘ಬ್ಯಾಡ್ರಿ ಮಾಸ್ತರ ಮಂದಿ ಅದಿರಿ, ನಿಮ್ಮ ಕಡೆ ದುಡ್ಡು ಇಸಕೊಳ್ಳೋದು ಸರಿ ಬರಾಂಗಿಲ್ಲರೀ’ ಎಂದು ಹೇಳಿ ಗಂಡ ಹೆಂಡತಿ ಮಾಸ್ತರರಿಗೆ ಕೈ ಮುಗಿದು ಬಿಳ್ಕೊಟ್ಟರು.
*
ಇತ್ತ ಮೂಡಗಲ್ಲು ಸಂಸ್ಥಾನದ ದಂಪತಿಗಳ ಪಯಣ ಕುದುರೆಯನ್ನರಸಿ ಮುಂದೆ ನಡೆದಿತ್ತು. ಯಾವ ಪ್ರಗತಿದಾಯಕ ಫಲಿತಾಂಶ ಲಭ್ಯವಾಗದೇ ದಂಪತಿಗಳಿಗೆ ನಿರಾಸೆಯಾಯಿತು, ಪಾಪ ಯಾಗದ ಕುದುರೆ ತಪ್ಪಿಸಿಕೊಂಡು ಯಾವ ಪರಿಸ್ಥಿತಿ ಅನುಭವಿಸುತ್ತಿದೆಯೋ ಎಂದು ಮರುಗಿದರು. ಸಂಜೆಯಾಗುತ್ತಾ ಬಂದಿತ್ತು, ಇನ್ನು ಹುಡುಕುವುದು ತರವಲ್ಲ ಎಂದು ತಮ್ಮ ಅರಮನೆ ಕಡೆಗೆ ವಾಪಸ್ಸು ಪ್ರಯಾಣ ಹೊರಟರು. ಇತ್ತ ಗುಣಸಿರಿ ಮಾಸ್ತರ ಮಂದಿಗೂ ನಿರಾಸೆಯಾಗಿ ಮರಳಿದರು, ಆಗಿನ್ನೂ ಮೊಬೈಲ್ ಸಂಪರ್ಕವಿರಲಿಲ್ಲ. ರಾತ್ರಿ ಬಂದು ಲ್ಯಾಂಡ್ ಫೋನ್ನಿಂದ ಕರೆ ಮಾಡಿ ನಿರಾಸೆ ಹಂಚಿಕೊಂಡರು. ನಾಳೆಗೆ ಏನಾದರೂ ಮಾಡಿದರಾಯ್ತೆಂದು ಇಂದಿನ ದಿನವನ್ನು ಹುಡುಕುವುರಲ್ಲೇ ಕಳೆದು ರಾತ್ರಿ ಊಟ ಮಾಡಿ ನಿದ್ರೆಯಲ್ಲಿ ಕಳೆದು ಹೋದರು.
*
ಮರುದಿನ ರವಿವಾರ ಬೆಳ್ಳಂ ಬೆಳಿಗ್ಗೆ ಜಿಲ್ಲಾ ಕೇಂದ್ರದಿಂದ ಕೇಂದ್ರದ ಆಡಳಿತ ಮಂಡಳಿ ದೌಡಾಯಿಸಿ ಬಂದರು. ಅರಮನೆಯ ಆವರಣದಲ್ಲಿ ಸಭೆ ಜರುಗಿತು. ಪಾಠ ಮಾಡುವ ಮಾಸ್ತರು, ಆಟದ ಮಾಸ್ತರು ಹಾಗೂ ಉಳಿದ ಸಿಬ್ಬಂದಿ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಮಂತ್ರಿಗಳು ಕೊಟ್ಟ ಯಾಗದ ಕುದುರೆ ಎಲ್ಲಿಯೇ ಇರಲಿ ಅದನ್ನು ಹುಡುಕುವದೆಂದು ಮತ್ತು ಸಿಗದಿದ್ದರೆ ಪೊಲೀಸ್ ಸ್ಟೇಷನ್ಗಳಿಗೆ ತಿಳಿಸಿ ಹುಡುಕಲು ಹಚ್ಚುವದೆಂದು ಸಭೆ ತೀರ್ಮಾನ ತೆಗೆದುಕೊಂಡು, ಜವಾಬ್ದಾರಿಗಳ ಹಂಚಿಕೆ ಮಾಡುತ್ತಿದ್ದಾಗ ಹೊರಗೆ ಮಕ್ಕಳು ಜೋರಾಗಿ ಮುಗಿಲು ಕತ್ತರಿಸಿ ಬೀಳುವ ಹಾಗೆ ಹೋ ಎಂದು ಚೀರತೊಡಗಿದರು, ಯಾರಿಗೆ ಏನಾಯಿತೆಂದು ಎಲ್ಲರೂ ತಡಬರಿಸಿ ಹೊರ ಓಡಿ ಬಂದರು. ಮಕ್ಕಳು ಸಂಭ್ರಮದಿಂದ ಕುಣಿಯುತ್ತಾ ಜೈಕಾರ ಹಾಕುತ್ತಾ ‘ನಮ್ಮ ಕುದುರೆ ಬಂತು ನಮ್ಮ ಕುದುರೆ ಬಂತು’ ಎಂದು ಚೀರತೊಡಗಿದರು. ಎಲ್ಲರೂ ಮೂಕ ವಿಸ್ಮಿತರಾಗಿ ಗೇಟಿನ ಕಡೆ ನೋಡಿದರು. ಕಣ್ಣು ಮೂಗಿನಿಂದ ಚೆಲುವೆಯಾದ, ಎತ್ತರ ನಿಲುವಿನ ಹುಡುಗಿಯೊಬ್ಬಳು ಝಾನ್ಸಿರಾಣಿ ರೀತಿಯಲ್ಲಿ ಕುದುರೆಯನ್ನು ಹತ್ತಿ ಅದನ್ನು ಓಡಿಸಿಕೊಂಡು ಬಂದಿದ್ದಳು. ನೇರ ಆಡಳಿತ ಕಛೇರಿ ಮುಂದೆ ಬಂದು ಕುದುರೆ ಮೇಲಿಂದ ಜಿಗಿದು ತಮ್ಮ ಕುದುರೇನ ತಂದೀನಿ ತೆಗೆದುಕೊಳ್ಳಿ ಎನ್ನುವ ರೀತಿಯಲ್ಲಿ ಕೈ ಮುಗಿದು ಆಡಳಿತಗಾರರಿಗೆ ಒಪ್ಪಿಸಿದಳು. ಎಲ್ಲರಲ್ಲೂ ಆಶ್ಚರ್ಯ ಇವಳಾರು ಎಂದು. ಎಲ್ಲರೂ ಬಹಳ ಸಂತೋಷ ಬಾರಮ್ಮ ಎಂದು ಅವಳನ್ನು ಅತ್ಯಂತ ಆಪ್ತವಾಗಿ ಮಾತನಾಡಿಸಿ ಅವಳಿಗೆ ಕೃತಜ್ಞತೆ ಹೇಳಿದರು. ಅದೇ ಹೊತ್ತಿಗೆ ಹಿಂದೆ ಬೈಕಿನಲ್ಲಿ ನಿನ್ನೆ ಊಟ ಕೊಟ್ಟ ಧಡೂತಿಯೂ ಮತ್ತು ಅವನ ಹೆಂಡತಿಯೂ ಬಂದರು. ಬಂದವರೇ ಆಡಳಿತ ಮಂಡಳಿ ಅವರಿಗೆ ಕೈ ಮುಗಿದು ‘ಇವಳು ನನ್ನ ಮಗಳು ಸಿರಿವಂತೆ, ನಿನ್ನೆ ಸಂಜೆ ಹೊತ್ತಿಗೆ ಸಾಂಗ್ಲಿಯಿಂದ ಬಂದು, ಬಸ್ಸಿನಿಂದ ಇಳಿದು ನಮ್ಮ ತ್ವಾಟಕ್ಕೆ ಬರುವಾಗ ದಾರಿಯಲ್ಲಿ ಮುಳ್ಳು ಕಂಟಿಯ ಹಳೆ ಬಾವಿಯಲ್ಲಿ ಈ ಕುದುರೆ ಬಿದ್ದದ್ದನ್ನು ಗಮನಿಸಿ ನಮ್ಮನ್ನೆಲ್ಲಾ ಕರೆದಳು. ನಾವೆಲ್ಲಾ ಸೇರಿ ಅದನ್ನು ಮೇಲೆ ತಂದು ಆರೈಕೆ ಮಾಡಿದೆವು. ನಿನ್ನೆಯಷ್ಟೇ ತಮ್ಮ ಮಾಸ್ತರ ಮಂದಿ ತಮ್ಮ ಕುದುರೆ ಕಳೆದದ್ದು ಹೇಳಿದ್ದರು, ಸ್ವತಃ ಕುದುರೆ ಸವಾರಿ ಬಲ್ಲ ನಮ್ಮ ಮಗಳು ತಮ್ಮ ಕುದುರೆ ತಂದಿದ್ದಾಳೆಂದು ವಿವರಿಸಿದರು. ದಂಪತಿಯ ಕಾಳಜಿಗೆ ಮತ್ತು ಅವರ ಮಗಳ ಸಾಹಸಕ್ಕೆ ಮೆಚ್ಚಿ ಆಡಳಿತ ಮಂಡಳಿಯವರು ತುಂಬಾ ಖುಷಿಗೊಂಡರು. ಅರಮನೆಯ ಆವರಣದಲ್ಲಿ ಕರೆದು ಸತ್ಕರಿಸಿದರು. ಮಹಾರಾಜರಿಗೆ ಸುದ್ದಿ ಮುಟ್ಟಿಸಿ ಸಂತಸ ಹಂಚಿಕೊಂಡರು. ಮತ್ತೆ ಅವಳಿಗೆ ಇಂದಿನಿಂದ ನೀನು ನಮ್ಮ ಶಾಲೆಯಲ್ಲಿಯೇ ಮಕ್ಕಳಿಗೆ ಕುದುರೆ ತರಬೇತಿ ನೀಡಲು ಸೇರಿಕೊಳ್ಳಬೇಕೆಂದು ನಾವು ಅತ್ಯಂತ ಸಂತೋಷದಿಂದ ನೇಮಕ ಮಾಡಿಕೊಳ್ಳುತ್ತಿದ್ದೇವೆಂದು ಘೋಷಿಸಿದರು. ದಂಪತಿಗಳ ಹರುಷಕ್ಕೆ ಪಾರವೇ ಇರಲಿಲ್ಲ, ಈ ಎಲ್ಲ ಘಟನೆಗಳನ್ನು ಕಣ್ಣು ಬಿಡದೇ ಗಮನಿಸುತ್ತಿದ್ದ ಹಾಕಿ ಮಾಸ್ತರರ ಖುಷಿ ಇಮ್ಮಡಿಯಾಗಿತ್ತು. ಉಳಿದ ಮಾಸ್ತರು ಹಿಂದಿನ ದಿನದ ಸಂಗತಿಯನ್ನು ಆಡಳಿತ ಮಂಡಳಿಯವರಿಗೆ ವಿವರಿಸಿದಾಗ ಅವರೆಲ್ಲಾ ಇದೊಂದು ಬೊನಸ್ ಖುಷಿಯೆಂದು ಬೀಗರನ್ನು ಒಪ್ಪಿಸಿ, ಹಾಕಿ ಮಾಸ್ತರಗೆ ಅವಳನ್ನು ತೆಗೆದುಕೊಳ್ಳವ ತೀರ್ಮಾನವಾಯಿತು. ಕುದುರೆಯೊಂದಿಗೆ ಬಂದವಳು ಇಲ್ಲಿಯೇ ಒಂದಾಗಿ ಉಳಿದಳು.
#
ವಿಳಾಸ :
ಡಾ.ಪ್ರಕಾಶ ಗ.ಖಾಡೆ
ಮನೆ ನಂ .ಎಸ್.135, ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ-587103
ಮೊ. 9845500890