Saturday, January 15, 2022

ಚಂಪಾ ಎಂಬ ಶಾಲ್ಮಲೆ ಡಾ.ಪ್ರಕಾಶ ಗ.ಖಾಡೆ

 




ಚಂಪಾ ಎಂಬ ಶಾಲ್ಮಲೆ

ಡಾ.ಪ್ರಕಾಶ ಗ.ಖಾಡೆ




ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆ

ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕೊಂಡವರಿಲ್ಲ

ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ 

ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ

ನೀನು ಹರಿಯುತ್ತಿರುವುದು ಮಾತ್ರ ಒಂದೇ ಖರೆ.

ಬಹುಶಃ 

ನಾನು ಬದುಕಬೇಕೆಂದಿರುವ ಬದುಕಿನಂತೆ

ನಾನು ಬರೆಯಬೇಕೆಂದಿರುವ ಕಾವ್ಯದಂತೆ.

ಚಂಪಾ (1990)




     ಹೌದು ಚಂಪಾ ಶಾಲ್ಮಲೆಯಂತೆ ಬದುಕಿದರು ಮತ್ತು ಶಾಲ್ಮಲೆಯಂತೆ ನಮ್ಮೊಡನೆ ಸದಾ ಇರುತ್ತಾರೆ. ಚಂಪಾ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಮಾತು ಉತ್ತರ ಕರ್ನಾಟಕದ ಜವಾರಿ ಭಾಷೆ. ತಾನು ಇಂಗ್ಲಿಷ ಪ್ರಾಧ್ಯಾಪಕರಾದರೂ, ವಿದೇಶಕ್ಕೆ ಹೋಗಿ ಇಂಗ್ಲಿಷ ಸಾಹಿತ್ಯ ಓದಿಕೊಂಡು ಬಂದರೂ ಅವರು ಈ ನೆಲದ ಶಕ್ತಿ, ಸೌಂದರ್ಯವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ಸಾಧಿಸಿಕೊಂಡು ಬಂದರು. ಅವರಲ್ಲಿ ಸದಾ ಹೊಸತನವನ್ನು ಶೋಧಿಸುವ ಮತ್ತು ಹೊಸತನವನ್ನು ಸೃಷ್ಟಿಸುವ ಅಪಾರ ಸೃಜನಶೀಲತೆ ಇತ್ತು. ಬರವಣಿಗೆಯಲ್ಲಿ ಅವರು ಯಾವ ಮಡಿವಂತಿಕೆಯನ್ನೂ ಇಟ್ಟುಕೊಳ್ಳಲಿಲ್ಲ. ನೇರವಾಗಿ ,ನಿಷ್ಟುರವಾಗಿ ಬರೆಯುತ್ತಿದ್ದರು ಮತ್ತು ಹಾಗೇನೆ ಬದುಕಿದ್ದರು. ಚಂಪಾ ಅವರ ಬರವಣಿಗೆ ಕುತೂಹಲದಿಂದ ಓದಿಸಿಕೊಂಡು ಹೋಗುವಂಥದು. ವ್ಯಂಗ್ಯ ವಿಡಂಬಣೆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷೆಯನ್ನು ಕೊಟ್ಟರು. ಸಮಕಾಲೀನ ಬದುಕು, ಸಿದ್ದಾಂತ, ಸಾಹಿತಿಗಳು ಮತ್ತು ರಾಜಕಾರಣಿಗಳು ಅವರ ಎಡಬಿಡಂಗಿತನ ಕುರಿತು ಬರೆಯುವಾಗ ಅವರ ಭಾಷೆಯ ವ್ಯಂಗ್ಯದ ಕಸುವು ಯಾರೂ ಅರ್ಥಮಾಡಿಕೊಳ್ಳುವಂಥದು. ತಿಳಿಹಾಸ್ಯ ಬೆರೆತ ಧಾರವಾಡ ಪ್ರಾದೇಶಿಕ ಸೊಗಡು ಅವರ ಬರವಣಿಗೆಯ ಜೀವದ್ರವ್ಯವಾಗಿದೆ. ಕನ್ನಡದಲ್ಲಿ ಕಾರ್ನಾಡ, ಕಂಬಾರ, ಲಂಕೇಶರಂತೆ ಚಂಪಾ ತಮ್ಮ ನಾಟಕಗಳ ಮೂಲಕ ಕನ್ನಡಕ್ಕೆ ಹೊಸತನ ತಂದರು. ಚಂಪಾ ಅವರ ನಾಟಕಗಳ ಕಥಾ ವಸ್ತುಗಳು ತಮ್ಮನ್ನು ತಾವು ತೆರೆದುಕೊಳ್ಳಹೋಗುವುದಿಲ್ಲ, ವಾಚ್ಯವೆನಿಸುವುದಿಲ್ಲ, ಒಂದರ್ಥದಲ್ಲಿ ಅಸಂಗತವೂ ಅಲ್ಲ, ನಿಗೂಢ ನೆಲೆಯ ಅರ್ಥವನ್ನು ಹೊತ್ತುಕೊಂಡು ಅಷ್ಟೇ ಗಾಢವಾಗಿ ಪ್ರೇಕ್ಷಕರನ್ನು ಕಾಡುವ ವಸ್ತುಗಳುಳ್ಳ ನಾಟಕಗಳಾಗಿವೆ. ಚಂಪಾ ಅವರ ಕೊಡೆಗಳು, ಟಿಂಗರ ಬುಡ್ಡಣ್ಣ ನಾಟಕಗಳು ಯಾವ ಕಾಲಕ್ಕೂ ಸಲ್ಲುವಂಥವು. 

        ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅವರು ಹೊರತರುತ್ತಿದ್ದ ಸಂಕ್ರಮಣ ಪತ್ರಿಕೆಯು ಒಂದು ರೀತಿಯಲ್ಲಿ ಸಾಹಿತಿಗಳ ತವರು ಮನೆಯಂತೆ ಇತ್ತು, ಇವತ್ತು ಖ್ಯಾತ ನಾಮರೆಲ್ಲಾ ತಮ್ಮ ಮೊದಲ ಬರಹಗಳನ್ನು ಪ್ರಕಟಿಸಿದ್ದು ಸಂಕ್ರಮಣವೇ. ಸಂಕ್ರಮಣದ ಮೂಲಕ ಒಂದು ಸಾಹಿತ್ಯ ಪತ್ರಿಕೆಯನ್ನಷ್ಟೇ ನಡೆಸಲಿಲ್ಲ, ಅವರು ಒಂದು ಸಾಹಿತ್ಯ ಪಡೆಯನ್ನೇ ಕಟ್ಟಿದರು. ಧಾರವಾಡ ವಿಶ್ವವಿದ್ಯಾಲಯವನ್ನು ಒಂದು ಪ್ರಖರ ಚಿಂತನೆಯ ನೆಲೆಯಾಗಿ ರೂಪಿಸಿದರು, ಸಾಹಿತ್ಯ ಜನಸಾಮಾನ್ಯರಿಗಾಗಿ ಮಿಡಿಯಬೇಕೆಂದು ಅವರು ಬಯಸಿದರು. ಬಂಡಾಯ ಸಾಹಿತ್ಯ ಸಂಘಟನೆಗೆ ಚಾಲನೆ ನೀಡಿ ಕನ್ನಡ ಸಾಹಿತ್ಯದ ಮಗ್ಗಲು ಬದಲಿಸಿದರು.ಹೊಸಗನ್ನಡ ನವ್ಯದ ನಂತರ ಬಂಡಾಯ ಸಾಹಿತ್ಯ ಚಳುವಳಿಯ ಸಂಘಟಕರಾಗಿ ,ನೇತಾರರಾಗಿ ಸಾಹಿತ್ಯಿಕ, ಸಾಂಸ್ಕøತಿಕ ಲೋಕಕ್ಕೆ ಹೊಸ ಆಯಾಮ ತಂದು ಕೊಟ್ಟರು.  ಒಂದೆಡೆ ಬರಗೂರ ರಾಮಚಂದ್ರಪ್ಪನವರು, ಇನ್ನೊಂದೆಡೆ ಚೆನ್ನಣ್ಣ ವಾಲೀಕಾರ ಅವರು ಬಂಡಾಯ ಸಂಘಟಣೆಗೆ ಹೆಗಲಾಗಿದ್ದರೆ ಚಂದ್ರಶೇಖರ ಪಾಟೀಲರು ನಮ್ಮ ಉತ್ತರ ಕರ್ನಾಟಕದ ಲೇಖಕರಿಗೆ ಒಂದು ಮಾದರಿಯಾಗಿದ್ದರು. ರಾಜಕಾರಣಿಯ ಕಪಟತನವನ್ನು, ಸ್ವಾಮಿಜಿಗಳ ಲಂಪಟತನವನ್ನು ಅವರೆಂದೂ ಸಹಿಸಲಿಲ್ಲ. ತಮ್ಮ ಹೋರಾಟಗಳ ಮೂಲಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಅವರು ಹುಟ್ಟು ಹಾಕಿದ ವೈಚಾರಿಕ ಕ್ರಾಂತಿ , ಕರ್ನಾಟಕವನ್ನು ವೈಚಾರಿಕ ಕರ್ನಾಟಕವಾಗಿ ಕಟ್ಟುವಲ್ಲಿ ನೆರವಾದವು. ಸಾಹಿತ್ಯಕ್ಕಷ್ಟೇ ಅವರ ಹೋರಾಟಗಳು ಸೀಮಿತವಾಗಿರಲಿಲ್ಲ ಕನ್ನಡ ನಾಡು ನುಡಿ, ನೆಲ ಜಲ, ,ಸಮಾಜ, ಧರ್ಮ, ಶಿಕ್ಷಣ, ರಾಜಕೀಯ, ಭಾಷೆ ಯಾವುದೇ ಇರಲಿ ಎಲ್ಲದಲ್ಲಿಯೂ ಅನ್ಯಾಯ, ಪಕ್ಷಪಾತ, ಶೋಷಣೆ ಕಂಡರೆ ತೀವ್ರವಾಗಿ ಹೋರಾಟಕ್ಕೆ ಅಣಿಯಾಗುತ್ತಿದ್ದರು, ಅವರ ಹೋರಾಟಕ್ಕೆ ಒಂದು ಶಕ್ತಿಯಿತ್ತು. ಗೋಕಾಕ ಚಳುವಳಿ ಸಂದರ್ಭದ ಹೋರಾಟ, ‘ಕನ್ನಡ ಕನ್ನಡ ಬರಿ ನನ್ನ ಸಂಗಡ’ ಎನ್ನುತ್ತಲೆ ಮಾತೃಭಾಷೆಯ ಆದ್ಯತೆಗಾಗಿ ಉಸಿರಿರುವವರೆಗೂ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಪ್ರಭುತ್ವದ ಹಿಡಿತವನ್ನು ಬಿಡಿಸಿಕೊಂಡು ಅವರು ನಡೆಸಿಕೊಟ್ಟ ಶಿವಮೊಗ್ಗ ಮೊದಲಾದ ಸಮ್ಮೇಳನಗಳು ಒಂದು ಮಾದರಿಯಾಗಿದ್ದವು. ಪ್ರೊ.ಚಂಪಾ ಅವರು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಯಾರ ಭಿಡೆ ಮುರುವತ್ತುಗಳನ್ನಿಟ್ಟುಕೊಳ್ಳದೇ ಕನ್ನಡವನ್ನು ಆಡಳಿತ ಭಾಷೆಯಾಗಿ ಗಟ್ಟಿಗೊಳಿಸಿದರು.  ‘ಕನ್ನಡ ಬೇಡದವರು, ಕನ್ನಡಿಗರಿಗೂ ಬೇಡ’ ಎಂದು ಸಾರಿದರು. ಧಾರವಾಡದ ಮಣ್ಣು ಬೇಂದ್ರೆ, ಪಾಪು, ಕಣವಿ ಅವರನ್ನು ನಾಡಿಗೆ ನೀಡಿದಂತೆ ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಚಂಪಾ ಧಾರವಾಡದ ಹೆಸರಿನಲ್ಲಿ ಹೆಸರಾದರು.

- ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

ಮೊ.9845500890

  


No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...